Saturday, January 16, 2010

ನಿಮಗಿದು ತಿಳಿದಿರಲಿ:

ಆಟಿಕೆ ಕೊಟ್ಟು ನಿಮ್ಮ ಕಂದಮ್ಮನ ಕೊಲ್ಲದಿರಿ:

(ಸಂಗ್ರಹ: ವಿಜಯ ಕರ್ನಾಟಕ ದಿನಪತ್ರಿಕೆಯಿಂದ ದಿನಾಂಕ: ೧೫..೦೧..೨೦೧೦

ಆಟಿಕೆಗಳೆಂದರೆ ಮಕ್ಕಳಿಗೆ ಪ್ರಾಣ. ಆದರೆ ಅದರ ಅಡ್ಡ ಪರಿಣಾಮಗಳು ಪ್ರಾಣಾಂತಿಕ. ಮಕ್ಕಳ ಪಾಲಿಗೆ ಅವು ವಿಷ..!
ಹೌದು. ವಿಷಕಾರಿ ಆಟಿಕೆಗಳನ್ನು ಎಲ್ಲೆಡೆ ಮಾರಲಾಗುತ್ತಿದೆ. ಬ್ರ್ಯಾಂಡ್ ರಹಿತ ಮಾತ್ರವಲ್ಲ, ಬ್ರಾಂಡೆಡ್ ಆಟಕೆ ಗಳೂ ಅಸುರಕ್ಷಿತ ಎಂಬುದನ್ನು ವಿಜ್ಞಾನ ಮತ್ತು ಪರಿಸರ ಕೇಂದ್ರ(ಸಿ.ಎಸ್. ಇ) ನಡೆಸಿದ ಅಧ್ಯಯನ ಎಚ್ಚರಿಸಿದೆ.

ಮಕ್ಕಳು ಆಟಿಕೆ ಗಳನ್ನು ಕಚ್ಚುವುದು ಅಥವಾ ಚೀಪುವುದನ್ನು ಮಾದುತಿರುತ್ತಾರೆ. ಈ ಅಭ್ಯಾಸ ತಪ್ಪಿಸಡೀ ಹೋದರೆ ಆಸ್ತಮಾ, ಶ್ವಾಸಕೋಶ ಮತ್ತು ಉಸಿರಾಟ ಸಮಸ್ಯೆಗಳು ಎದುರಾಗುತ್ತವೆ. ಈ ವಿಷಕಾರಿ ವಸ್ತುಗಳು ಮಕ್ಕಳ ಆರೋಗ್ಯಕ್ಕೆ ಮಾರಕ ಎಂದು ಅಧ್ಯಯನ ಹೇಳಿದೆ.
ನಾನ ಮಾದರಿಯ ಆಟಿಕೆಗಳನ್ನು ಪ್ರಯೋಗಕ್ಕೆ ಒಳಪಡಿಸಿರುವ ಸಿ.ಎಸ್.ಇ ಯ ಮಾಲಿನ್ಯ ನಿಗಾ ಪ್ರಯೋಗಾಲಯ, ತೀವ್ರ ಕಳವಳ ವ್ಯಕ್ತಪಡಿಸಿದೆ. ಪ್ಲಾಸ್ಟಿಕ್ ಮೃದುಗೊಳಿಸಲು ಥ್ಯಾಲೇಟ್ಸ್ ಎನ್ನುವ ರಾಸಾಯನಿಕವನ್ನು ಬಳಸಲಾಗುತ್ತದೆ. ಇದು ಆಟಿಕೆ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಮಕ್ಕಳ ಪಾಲಿಗೆ ಇದು ವಿಷವಾಗುತ್ತಿದೆ.
ಸಾಮಾನ್ಯವಾಗಿ ಮೂರು ವರ್ಷದೊಳಗಿನ ಮಕ್ಕಳ ದೇಹವನ್ನು ಥ್ಯಾಲೇಟ್ಸ್ ಸೇರುತ್ತಿದೆ. ಏಕೆಂದರೆ ತಿಳುವಳಿಕೆ ಕೊರತೆಯಿಂದ ಆ ವಯಸ್ಸಿನ ಮಕ್ಕಳು ಆಟಿಕೆ ಗಳನ್ನು ಜಗಿಯುವುದು ಸಾಮಾನ್ಯ ಎನ್ನುತ್ತಾರೆ ಸಿ.ಎಸ್.ಇ ನಿರ್ದೇಶಕಿ ಸುನಿತಾ ನಾರಾಯಣ್.

ಚೀನಾ ಆಟಿಕೆಗಳಲ್ಲಿ ಹೆಚ್ಚು ವಿಷ: ಅಧ್ಯಯನದ ವೇಳೆ, ದಿಲ್ಲಿಯ ನಾನ ಭಾಗಗಳಲ್ಲಿ ೨೪ ಆಟಿಕೆಗಳನ್ನು ಖರೀದಿಸಿದೆವು. ಮಕ್ಕಳು ಸಾಮಾನ್ಯವಾಗಿ ಚೀಪುವ, ಬಾಯಲ್ಲಿ ಅಗಿಯುವ ಆಟಿಕೆಗಳನ್ನೇ ಹೆಚ್ಚಾಗಿ ಆರಿಸಿದೆವು. ಚೀನಾ (೧೫), ಭಾರತ (೭), ತೈವಾನ್ (೨), ಥಾಯ್ಲೆಂಡ್ನಲ್ಲಿ (೧) ತಯಾರಾದ ಆಟಿಕೆಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಯಿತು. ಚೀನಾ, ತೈವಾನ್ ನ ಆಟಿಕೆಗಳಲ್ಲಿ ಹೆಚ್ಚು ವಿಷ ಕಂಡು ಬಂದಿದೆ ಎನ್ನುತ್ತಾರೆ ಸಿ.ಎಸ್.ಇ ಸಹ ನಿರ್ದೇಶಕ ಚಂದ್ರ ಭೂಷಣ್.

ಫನ್ ಸ್ಕೂಲ್ ಮತ್ತು ಮತ್ತೆಲ್ ಸೇರಿದಂತೆ ಪ್ರತಿಷ್ಟಿತ ಬ್ರಾಂಡ್ ಗಳ ಆಟಿಕೆಗಳನ್ನು ಪ್ರಯೋಗದ ವೇಳೆ ಬಳಸಿಕೊಳ್ಳಲಾಗಿತ್ತು. ಈ ವೇಳೆ ಎಲ್ಲ ಆಟಿಕೆಗಳಲ್ಲೂ ಹೆಚ್ಚಿನ ಥ್ಯಾಲೇಟ್ಸ್ ಕಂಡುಬಂತು. ಪ್ರಯೋಗಕ್ಕೆ ಬಳಸಿಕೊಳ್ಳಲಾದ ಚೀನಾದ ೧೪ ಆಟಿಕೆಗಳ ಪೈಕಿ ೮ರಲ್ಲಿ ಈ ಪ್ರಮಾಣ ಹೆಚ್ಚಾಗಿತ್ತು. ಭಾರತದ ಆಟಿಕೆಗಳ ಪೈಕಿ ಒಂದು ಕಂಪನಿಯ ಆಟಿಕೆ ಯಲ್ಲಷ್ಟೇ ಹೆಚ್ಚಿನ ಹಾನಿಕಾರಕ ವಸ್ತು ಪತ್ತೆಯಾಗಿದೆ ಎಂದು ಭೂಷಣ್ ಹೇಳಿದ್ದಾರೆ.
ಏನಿದು ಥ್ಯಾಲೇಟ್ಸ್ ?
ಪ್ಲಾಸ್ಟಿಕ್ ಮೃದುಗೊಳಿಸಲು ಈ ವಿಷಯುಕ್ತ ರಾಸಾಯನಿಕ ಬಳಸುತ್ತಾರೆ. ಈ ರಾಸಾಯನಿಕ ಪುರುಷರ ಸಂತಾನ ಶಕ್ತಿ ಕುಗ್ಗಿಸುತ್ತದೆ. ಶ್ವಾಸಕೋಶಕ್ಕೆ ತೊಂದರೆ, ಗರ್ಭಕ್ಕೆ ತೊಡಕು, ಆಸ್ತಮಾ, ಅಲರ್ಜಿ ಮತ್ತಿತರ ತೊಂದರೆಗೆ ಇದು ಕಾರಣವಾಗುತ್ತದೆ. ಅಲ್ಲದೆ ವೀರ್ಯದ ಫಲವತ್ತತೆ ಕಡಿಮೆ ಯಾಗುತ್ತದೆ. ಅಪ್ರಾಪ್ತ ವಯಸ್ಸಲ್ಲೇ ಎದೆ ಬೆಳೆಯುತ್ತದೆ.

Thursday, April 9, 2009

ರಾಜಕೀಯ (ತಂತ್ರ-ಕುತಂತ್ರ)


ನುಡಿವುದೊಂದು ನಡೆವುದೊಂದು

ನಡುವಿನಲ್ಲಿ ನೆಡುವುದೊಂದು

ಹಡೆವುದೊಂದು ಒಡೆವುದೊಂದು

ಮುಗಿದ ಮೇಲೆ ತರುವುದೊಂದು


ಆದಿಯೊಂದು ಅಂತ್ಯವೊಂದು

ಆಸೆಯಿಟ್ಟು ಮುಡಿಸಿದೊಂದು

ಮೂರ್ಖಜನರು ನಂಬಲೆಂದು

ಹಬ್ಬವಿಲ್ಲ, ಬರೀ ಯುದ್ಧವಿಂದು


ಇರುವ ವೇಳೆ ಇಲ್ಲ ಒಂದೂ

ಸತ್ತ ಮೇಲೆ ಕೊಡುವುದೊಂದು

ಹೆಸರ ಕಲ್ಲ ಕೆತ್ತಲೆಂದು

ಪೂವ ಹಾಕಿ ಮುಗಿಸಿದಂದು


ಯಾನವೊಂದು ತಾಣವೊಂದು

ಕುಡಿತದಲ್ಲೇ ಮಗ್ನರೆಂದು

ಕಾಲನೆಳೆದು ನಗುವುದೊಂದು

ಇದೇ ರಾಜಕೀಯ ಕುತಂತ್ರವಿಂದು

Wednesday, April 8, 2009

ಕೊಲ್ಲದಿರಿ ನನ್ನನ್ನು - (ಮರಗಿಡಗಳು ಮತ್ತು ಆಮ್ಲಜನಕ)

ಉಸಿರು ಉಸಿರಲಿ ನನ್ನ ಹೆಸರು
ಕೊಡುವ ದಾತನೆ ಮರೆತಿರಾ?
ಕೊಚ್ಚಿ ಕೆಡುಹುತ ಪಸಿರು ಮರೆತರೆ
ಮುಂದೆ ದಿನಗಳ ಬಲ್ಲಿರಾ?

ನನ್ನ ಉಸಿರೊಳಗುಸಿರ ಜೀವ
ವನ್ಯ ಮೃಗಗಳ ಕಂಡಿರಾ?
ಗೆಳೆಯ ವರುಣನ ಕೂಗು ನಾನು
ಬರಡು ಭೂಮಿಯ ತಡೆಯಿರಾ?

ಇಳೆಯ ರಾಜನ ಸೊಬಗ ಅಂದ
ಕಂಪು ಪರಿಮಳ ತರಿಸಿರಾ?
ಹಕ್ಕಿ ಗೂಡೊಳು ಪುಟ್ಟ ಜೀವ
ನನ್ನ ಬೆಲೆಯನು ತಿಳಿಯಿರಾ?

ಎದೆಯ ಬಡಿತದ ಗುಟ್ಟು ನಾನು
ಇರದೆ ನಾನು ಬದುಕಿರಾ?
ನಾನು ಉಳಿದರಳಿಯದಿರುವಿರಿ
ಜಗದ ಸತ್ಯಕೆ ಮಣಿಯಿರಾ?

Monday, March 23, 2009

ಒಡೆದ ಮನಸು

ಹರಿದ ರವಿಕೆಯನುಟ್ಟು ಮೈಯೊಡ್ದಿ ನಗುತಿಹಳು
ಬಿಸಿಲಿನೊಳು ಚಲಿಸುತ್ತ ದನಕರುಗಳ ಬಳಗದಲಿ
ಕಲ್ಲಾಗಿ ಕಲ್ಲಿನೊಳು, ಮುಳ್ಳಾಗಿ ಮುಳ್ಳಿನೊಳು
ಕಟ್ಟಿತ್ತು ಹೆಪ್ಪುಂಡು ಪಾದಗಳು ಬಲವಾಗಿ

ಹಸಿದ ಹೊಟ್ಟೆಗೆ ಬೇಕು ಮೇವುಂಡ ಹಾಲಂತೆ
ಎರಡಾಣೆಯ ಗಳಿಕೆಯೊಳು ಒಪ್ಪತ್ತಿನ ಆಹಾರ
ನಗ್ನತೆಯ ಸತ್ಯಕ್ಕೆ ಬೆರಗಾದ ಬದುಕಂತೆ
ಮುಗ್ಧತೆಯು ಸಾಗುತಿದೆ ಆ ಬಡಕಲು ಶಾರೀರ

ಬರದಿರಲು ಮುಮ್ಮೋಡ ನೆನಸಿದಾ ಸಮಯದೊಳು
ಇಂಗುತ್ತ ಕ೦ಗಳಲಿ ಮುಚ್ಚಿಟ್ಟ ಕನಸುಗಳು
ಬಿರುಸಿನಲಿ ಹಬ್ಬಗಳು ಹೊಸಿಲಲ್ಲಿ ನಿಂತಿರಲು
ಇನ್ನೆಲ್ಲಿ ಹೊಸ ಉಡುಪು? ಶುಚಿ ಮಾಡಿ ಹಾಕಿರಲು..

ಮುಖದಲ್ಲಿ ಸಿಂಧೂರ, ಮೂಗುತಿಯ ಗತಿಯಿಲ್ಲ
ಆಸೆಗಳ ಬುತ್ತಿಯಲಿ ನಿಟ್ಟುಸಿರ ಸ್ಥಳವಿಲ್ಲ
ಆ ಒಡೆದ ತುಟಿಯೊಳಗೆ ಹುಡುಕಿದರೂ ಸಿಹಿಯಿಲ್ಲ
ಉಕ್ಕೇರದು ಮಂದಾರ, ನೆಲೆಯಿಲ್ಲ ಕಹಿಯೆಲ್ಲ..

Sunday, March 1, 2009

ಸಾವು‏

ಸಾವೇಕೆ ಬರ್ತಾಯಿಲ್ಲಾ ?

ಬಹುಷಃ ಕರ್ಮಗಳಿನ್ನೂ ಕಳೆದಿಲ್ಲ.

ಕರ್ಮಗಳೇಕೆ ಸಾವಿಗೆ ಆಧಾರವಾಗಿ ನಿಂತಿವೆ?

ಅದು ಬ್ರಹ್ಮನಿಗೂ ಸರಿಯಾಗಿ ತಿಳಿದಿಲ್ಲ.


ಪ್ರಯತ್ನಿಸಿದರೊಂದು ಬಾರಿ ಬಾಳೇಗೆ ಮೊನಚುವುದು?

ಕೊನೆವರೆಗೂ ಅದು ಹೇಡಿಯಾಗಿಯೇ ಉಳಿಯುವುದು.

ಹಾಗಾದರೆ ಹೇಡಿಗಳೇಕೆ ಬದುಕುವುದಿಲ್ಲ ?

ಜೀವನವನ್ನು ಸಾಗಿಸಲು ಬಾರದೇ ಸತ್ತಿದ್ದೆಲ್ಲ.


ನಿರಂತರ ಬದುಕಿನೊಳು ಮುಳ್ಳು-ಕಲ್ಲುಗಳೇ ಮೇಲೇಕೆ?

ನಂಬಿಕೆ ಛಲವೆರಡಿಟ್ಟು ದಾಟಿ ಬಾ ಎನಲಿಕ್ಕೆ.

ದಾಟಿ ಬರುವ ಸಮಯದಲಿ ಎಷ್ಟೋ ಜನ ಎಡವಿ ಬಿದ್ದದ್ದೇಕೆ?

ಅವರಿನ್ನೂ ಅದರಲ್ಲಿ ಪರಿಣಿತರಾಗದಿದ್ದುದ್ದಕ್ಕೆ.


ತಿಂದ ಮೇಲೆ ನೀರು ಕುಡಿಯಲೇಬೇಕು ಎನುವುದೇಕೆ?

ಇಳಿಯದಿದ್ದರೆ ಕೆಡಕಾಗುವುದು ಎನುವುದಕ್ಕೆ.

ಹಾಗಾದರೆ ಹಣ ತಿನ್ನುವವರು ಹೆಚ್ಚಿದರೇತಕೆ?

ಹಣವಿಲ್ಲದೆ ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲವದಕ್ಕೆ.


ಕಷ್ಟ ಅನ್ನೋದು ಬರೀ ಮನುಷ್ಯರಿಗೇ ಇರೋದು ಅನುವುದೇತಕೆ?

ಪ್ರಾಣಿ-ಪಕ್ಷಿ-ಗಿಡ-ಮರಗಳಿಗೆ ಹೇಳಲಾಗುವುದಿಲ್ಲವಲ್ಲ ಅದಕ್ಕೆ.

ಆದರೂ ಸಾವು ಬರುತ್ತಾ ಇಲ್ಲ ಏತಕ್ಕೆ?

ತಾನಾಗಿಯೆ ಬರುವ ಸಾವಿಗೆ ಸೂಕ್ತ ಉತ್ತರ ಇದೆ ಅದಕ್ಕೆ.

ಕಲ್ಮಷ‏

ಮನಸಿನಲೊಂದು ಕಲ್ಮಷವು ಅರಿಯದೆಯೆ ಬೆಳೆದಿತ್ತು
ಅದು ನನ್ನೊಳು ಕೂತು ಲೀಲಾಜಾಲವಾಗಿ ಹಾಡಿತ್ತು


ಮೋಹದಿಂದೊಳು ಧೂಳ್ಗಟ್ಟಿತ್ತು, ಹೃದಯದಿ ಎಲ್ಲೋ
ಮೂಲೆಯಲಿ ಕೊಳೆತು ಸೂಸುತ ಜೀವನ ಸಾಗಿತ್ತು


ದಿನಗಳುರುಳುತಿರೆ ಮಾಸುತ್ತ ಮಾಗುತ್ತ ಮಂಕು ಕವಿದಿತ್ತು
ಬುದ್ಧಿವಿಕನಿಸದೆ ಅರೆಪರಿಯಾಗಿ ಮೆಲುಕು ಹಾಕಿತ್ತು


ಎನಿತು ಮಾಯೆಯೋ ಈ ಪ್ರೀತಿ ಮಸಣಕೆನಗೆ ದಾರಿ ತೋರಿತ್ತು
ದೇವನಿಟ್ಟ ಆಯಸ್ಸು ಲೆಕ್ಕಗಳೆಲ್ಲ ಒಂದು ಕಡೆ ತಪ್ಪಾಗಿತ್ತು


ಹಳ್ಳವಂತೆನಗೆ ಬಿದ್ದರೊಂದು ಬಾರಿ, ಹಣೆಯ ಬರಹದಿ ಸ್ಪಷ್ಟನೆ ಕೆತ್ತಿತ್ತು
ಯಾವ ಉಳಿಯು ಬೇಡವಿಲ್ಲಿ, ಬೆನ್ನ ಹಿಂದೆಯೇ ಬಂದೆನ್ನ ನೂಕಿತ್ತು


ಭಯದ ನೆರಳಲಿ ನಿಂತು ಬೆವೆತಂತೆ ಜೀವ ಸುಡುತ್ತಿತ್ತು
ಬದುಕಿನ ಮೂಲ ದಿಕ್ಕನರಿಯದೆ ಮನ ಪರಿತಪಿಸಿತ್ತು


ಎನ್ನ ಕನಸಿನರಮನೆಯಲೊಂದು ಹಾಡಿನ ಜೇಂಕಾರ ಕೂಗಿತ್ತು
ಹಾಡು ಹಾಡಾಗದೆಯೇ ಕಂಬಳಿಯೊದ್ದು ಹೆಪ್ಪುಗಟ್ಟಿ ಮಲಗಿತ್ತು


ಬದುಕು ಜ೦ಜಾಟದಲೂ ಮೋಹ ದಿಗ್ಭಂಧನಕ್ಕೊಳಗಾಗಿತ್ತು
ಹೊರದಾರಿ ಕಾಣದೆಯೆ ಅಂಧಯಷ್ಟಿಯನಿಡಿದು ಸಾಗಿತ್ತು


ವಿಧಿ ಬರೆದ ಆಟದೊಳು ನೋವಿನುಪಸ್ಥಿತಿಯೇ ಹೆಚ್ಚಿತ್ತು
ಬೆಳಕ ಕಾಣುವ ಮುನ್ನ ಕಾಲ ಚಿಗುರೊಡೆದು ಮೀರಿತ್ತು