Friday, December 14, 2018

ಒಂದು ಮುಳ್ಳಿನ ಕಥೆ



ನಮಸ್ಕಾರ ಗೆಳೆಯರೇಆಗ ನನಗೆ ೨೯ ವರ್ಷ ತುಂಬಿ ೩೦ ವರ್ಷದ ಹಾದಿಯಲ್ಲಿದ್ದೆ.
ಎಲ್ಲಾ ಪೋಷಕರಂತೆ ನನ್ನ ಅಪ್ಪ-ಅಮ್ಮ ಕೂಡ ನನಗೆ ಮದುವೆ ಮಾಡಲೆಂದು ಹುಡುಗಿ ಹುಡುಕುತ್ತಿದ್ದರು. ಒಂದೆರಡು ಕಡೆ ಮದುವೆ ಬ್ರೋಕರ್ ಇಂದ ಮೈಸೂರಿನಲ್ಲಿ ಹುಡುಗಿ ನೋಡಲೆಂದು ಕರೆಯೂ ಬಂದಿತ್ತು.

ಅಂದು ಶನಿವಾರ, ಮರುದಿನ ಭಾನುವಾರ ಹುಡುಗಿ ನೋಡುವ ಪ್ರೋಗ್ರಾಮ್ ಫಿಕ್ಸ್ ಮಾಡಿದ್ದರು. ನನ್ನ ಆಫೀಸಿನಲ್ಲಿ ಪ್ರತೀ ಶನಿವಾರ ಒಬ್ಬರಂತೆ ಒಬ್ಬರು ವಾರದ ಪಾರ್ಟಿ ಕೊಡಿಸುವುದಾಗಿ ಒಪ್ಪಿದ್ದರು. ಅದರಂತೆಯೇ ವಾರದ ಉಸ್ತುವಾರಿವಹಿಸಿದ್ದ ಸಹೋದ್ಯೋಗಿಯೊಬ್ಬರು ಅಂದು ಎಲ್ಲರಿಗೂ "ವೆಜ್ ಪಪ್ಸ್ ಮತ್ತು ಎಗ್ ಪಪ್ಸ್" ಆರ್ಡರ್ ಮಾಡಿದ್ದರು. ಆಗ ಸಮಯ ಸಂಜೆ ಗಂಟೆ ಆಗಿತ್ತು

ನಮ್ಮ ಆಫೀಸ್ ಬಾಯ್ ತಂದ "ವೆಜ್ ಪಪ್ಸ್ ಮತ್ತು ಎಗ್ ಪಪ್ಸ್" ಅನ್ನು ನಾನೇ ಎಲ್ಲರಿಗೂ ಸಮನಾಗಿ ಹಂಚುವುದಾಗಿ ಅವನಿಂದ ಕಿತ್ತುಕೊಂಡೆ. ಹಾಗೆಯೇ ಪ್ಯಾಕ್ ಮಾಡಿದ್ದ ಕವರ್ ಅನ್ನು ಓಪನ್ ಮಾಡುತ್ತಾ ಕವರ್ ಮೇಲೆ ನೇತಾಡುತ್ತಾ ಇದ್ದ ಒಂದೆರಡು ಸ್ಟೇಪ್ಲರ್ ಪಿನ್ ಗಮನಿಸಿ ಗಾಬರಿ ಆದೆ.. ಬೇಕರಿಯವರು ಸರಿಯಾಗಿ ಪ್ಯಾಕ್ ಮಾಡಿ ಸ್ಟೇಪ್ಲರ್ ಪಿನ್ ಹಾಕಿರುವುದಿಲ್ಲ. ಒಂದು ವೇಳೆ ಸ್ಟೇಪ್ಲರ್ ಪಿನ್ ನಾವು ತಂದ ತಿಂಡಿಗೆ ಸೇರಿಕೊಂಡು ನಾವು ನೋಡದೆ ಅದನ್ನ ತಿಂದರೆ ಅಲ್ಲಿಗೆ ಮುಗಿಯಿತು ನಮ್ಮ ಕಥೆ.

ಒಬ್ಬರಿಗೊಬ್ಬರು ರೇಗಿಸಿಕೊಂಡು ನಮ್ಮ ಕಂಪನಿಯ  ಓನರ್ ಬಗ್ಗೆ ಟೀಕೆ ಮಾಡಿಕೊಂಡು ಪಪ್ಸ್ ಅನ್ನು ಸ್ವಾದಿಸಿದೆವು. ಅದಾದ ನಂತರ ನನ್ನಲ್ಲೇನೋ ಒಂದು ರೀತಿಯ ಕಳವಳ, ಏನೋ ಹೇಳಿಕೊಳ್ಳಲಾಗದಂತಹ ನೋವು, ಉಸಿರುಗಟ್ಟುವಂತಹ ಅನುಭವ. ಕಣ್ಣೀರು ಧಾರಾಕಾರವಾಗಿ ಸುರಿಯತೊಡಗಿತು. ನನ್ನ ಸಹೋದ್ಯೋಗಿಗಳು ನನ್ನನ್ನು ಕಂಡು ಹೆದರಿದರು. ಏನಾಯಿತು ಎಂದು ಕೇಳುವಷ್ಟರಲ್ಲಿ ನನ್ನ ಗಂಟಲಿನಲ್ಲಿ ಏನೋ ಚುಚ್ಚಿದಂತೆ ಆಗುತ್ತಿದೆ. ನುಂಗುವುದಕ್ಕೂ ಆಗುತ್ತಿಲ್ಲ, ಉಗುಳುವುದಕ್ಕೂ ಆಗುತ್ತಿಲ್ಲ, ರೀತಿಯ ಭಯಾನಕ ನೋವು. "ನನಗೆ ಆಗುತ್ತಿಲ್ಲ, ನನ್ನ ಗಂಟಲಿನಲ್ಲಿ ಏನೋ ಸಿಕ್ಕಿ ಹಾಕಿಕೊಂಡಿದೆ" ಎಂದು ಅಳತೊಡಗಿದೆ. ನನಗಾಗಲೇ ಯೋಚನೆಕಾಡಲಾರಂಭಿಸಿತು, "ಸ್ಟೇಪ್ಲರ್ ಪಿನ್ ಏನಾದರೂ ಪಪ್ಸ್ ನಲ್ಲಿ ಸೇರಿ ಅದನ್ನು ನುಂಗಿದೆನಾ "ಎಂದು.   ಭಯಭೀತರಾದ ನನ್ನ ಸಹೋದ್ಯೋಗಿಗಳು ನನ್ನ ಅಳಲನ್ನು ಕಂಡು ನನಗೆ ಶೃಶ್ರುಷೆ ಮಾಡಲು ಮುಂದಾದರು. ಒಬ್ಬರು ಹೇಳಿದರು ಬಾಯಿಯಲ್ಲಿ ಚೆನ್ನಾಗಿ ನೀರು ತುಂಬಿಕೊಂಡು ಜೋರಾಗಿ ಮುಕ್ಕಳಿಸು ಎಂದರು, ಅದನ್ನೂ ಮಾಡಿದೆ,
ಪ್ರಯೋಜನೆ ಆಗಲಿಲ್ಲ, ನಾನು ನೋವು ಪಡುತ್ತಿದ್ದುದ್ದಕ್ಕಿಂತ ಹೆಚ್ಚು ನೋವು ಕಾಡಲಾರಂಭಿಸಿತು. ನನ್ನ ಇನ್ನೊಬ್ಬರು ಸಹೋದ್ಯೋಗಿ ಪಚ್ಚಬಾಳೆಹಣ್ಣುನ್ನು ತರಿಸಿ ತಿನ್ನಲು ಕೊಟ್ಟರು. ಚೆನ್ನಾಗಿ ತಿನ್ನು ಅದರ ಜೊತೆಗೆ ಗಂಟಲಿನಲ್ಲಿ ಏನಾದರೂ ಸಿಕ್ಕಿಹಾಕಿ ಕೊಂಡಿದ್ದರೆ ಅದು ಹೊಟ್ಟೆ ಒಳಗಡೆ ಜಾರುವುದು ಎಂದರು. ಅದನ್ನೂ ಮಾಡಿದೆ. ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಯಿತು. ನನಗೆ ಇನ್ನೂ ಹೆಚ್ಚು ನೋವು ಉಂಟಾಗಲಾರಂಬಿಸಿ ತಿಂದಿದ್ದ ಬಾಳೆಹಣ್ಣನ್ನೆಲ್ಲಾ ವಾಂತಿ ಮಾಡಿದೆ. ನೀರು ಕುಡಿದರೂ ವಾಂತಿ, ಹಣ್ಣು ತಿಂದರೂ ವಾಂತಿಯಾಗಲು ಶುರುವಾಯಿತು. ಕೆಲವೇ ನಿಮಿಷದಲ್ಲಿ ಕಟ್ಟು-ಮಸ್ತಾಗಿದ್ದ ನಾನು ಸುಸ್ತಾಗಿ ಕೂತಲ್ಲೇ ಕುಳಿತುಬಿಟ್ಟೆ.. ನನ್ನ ಸಹೋದ್ಯೋಗಿಗಳು ನನ್ನ ವ್ಯಥೆ ಕಂಡು ಬೆವರತೊಡಗಿದರು. ಮೊಬೈಲ್ ಟಾರ್ಚ್ ಮೂಲಕ ನನ್ನ ಗಂಟಲಿನಲ್ಲಿ ಏನಾದರೂ ಸಿಕ್ಕಿಹಾಕಿಕೊಂಡಿದೀಯಾ ಎಂದು ನೋಡಿದರೂ ಅದು ಅವರಿಗೆ ಕಾಣಲಿಲ್ಲ.
ಮರುದಿನ ಬೇರೆ ನಾನು ಹುಡುಗಿ ನೋಡಲು ಮೈಸೂರಿಗೆ ಹೋಗಬೇಕಾಗಿತ್ತು. ಯೋಚನೆಯನ್ನೇ ಬದಿಗಿಟ್ಟು ನನ್ನ ಸಹೋದ್ಯೋಗಿಗಳಿಗೆ ನನ್ನನ್ನು ಹಾಸ್ಪಿಟಲ್ಗೆ ಕರೆದೊಯ್ಯಲು ಕೇಳಿಕೊಂಡೆ. ಆಗಾಗಲೇ ರಾತ್ರಿ .೧೫ ಆಗಿತ್ತು. ಸಹೋದ್ಯೋಗಿಯಾದ ಗೋಪಾಲ್ ಸರ್ ನನ್ನನ್ನು ಕ್ಲಿನಿಕ್ಕಿಗೆ ಕರೆದೋಯ್ದರು. ಅಲ್ಲೋ ರೈಲಿನ ಬೋಗಿಯ ಹಾಗೆ ರೋಗಿಗಳು ಉದ್ದಕ್ಕೂ ಕ್ಯೂ ನಿಂತಿದ್ದರು. ವಾರ್ಡೆನ್ ಕರೆದು ನನ್ನ ಪರಿಸ್ಥಿತಿ ಹೇಳಿದರೂ ಅವಳು ಕ್ಯೂ ಮೂಲಕವೇ ಬರಬೇಕೆಂದು ಹೇಳಿದಳು. ನನಗೆ ನೋವು ತಡೆಯಲು ಆಗದಿದ್ದರಿಂದ ನನ್ನನ್ನು ಗೋಪಾಲ್ ಸರ್ ಬೇರೊಂದು ಹಾಸ್ಪಿಟಲ್ ಗೆ ಕರೆದೊಯ್ದರು.  ಅದೊಂದು ಮಲ್ಟಿ ಸ್ಪೆಷಾಲಿಟಿ ಪ್ರೈವೇಟ್ ಹಾಸ್ಪಿಟಲ್ ಆದರೂ ವೀಕೆಂಡ್ ಸಂಜೆ ೮ ಗಂಟೆ ಆದ್ದರಿಂದ ಡಾಕ್ಟರ್ಸ್ ಇರಲಿಲ್ಲ, ಇದ್ದರೂ ಸ್ಕ್ಯಾನಿಂಗ್ ಮಾಡುವವರು ಹೊರಟುಹೋಗಿದ್ದರು. ಕಷ್ಟ ಪಟ್ಟು ಸಮಾಧಾನವಾಗಿ ಕೂತ ನಾನು ಟೋಕನ್ ತೆಗೆದುಕೊಂಡು ನಿಮಷಗಳನ್ನು  ಎಣಿಸತೊಡಗಿದೆ. ನನ್ನ ಟೋಕನ್ ನಂಬರ್ ೫೩ ಕರೆದಾಗ ಸ್ವಲ್ಪ ಹರುಷದಿ ಒಳಗಡೆ ಹೋಗಿ ನೋಡಿದರೆ ಆ ಡಾಕ್ಟರ್ ಆಗಲೇ ಮನೆಗೆ ಹೊರಡಲು ರೆಡಿಯಾಗಿ ಕುಳಿತಿದ್ದ ಮತ್ತು  ಆ ಡಾಕ್ಟರ್ಗೆ 
ಸ್ವಲ್ಪ ವಯಸ್ಸಾಗಿತ್ತು. ಆ ಡಾಕ್ಟರ್ ನನ್ನ ನೋವಿನ ಪರಿಯನ್ನು ಆಲಿಸುತ್ತಲೇ ಟಾರ್ಚ್ ಲೈಟ್ ಹಿಡಿದು ನನ್ನ ಗಂಟಲನ್ನು ನೋಡಿದರು. ಅವರಿಗೂ ಸಹ ಏನೂ ಸರಿಯಾಗಿ ಕಾಣಲಿಲ್ಲ. ಆದರೆ ಕಿರುನಾಲಿಗೆಯ ಕೆಳಗೆ ಕೆಂಪಾಗಿ ಕಾಣುವುದನ್ನು ಗಮನಿಸಿ ಇದು ಮೇಜರ್ ಕೇಸ್ ಆಗುತ್ತದೆ. ಇದನ್ನು ಆಪರೇಷನ್ ಮಾಡಿ ತೆಗೆಯಬೇಕಾಗುತ್ತದೆ ಎಂದರು. ಇಲ್ಲವಾದರೆ ನಿನ್ನ ಜೀವಕ್ಕೇ ಅಪಾಯವೆಂದೂ ಹಾಗು ಇಂದಾಗಲೇ ಸ್ಕ್ಯಾನಿಂಗ್ ಮಾಡುವವರು ಇಲ್ಲವೆಂದೂ ಹೇಳಿ ಈಗೇನು ಮಾಡೋದು ಎಂದು ಭಯ ಪಡಿಸಿದರು.

ಡಾಕ್ಟರ್- ನಿನಗೆ ಉಸಿರಾಡಲು ತೊಂದರೆಯಾಗುತ್ತಿದೀಯಾ ಎಂದು ಕೇಳಿದರು.
ನಾನು - ಅಷ್ಟೇನಿಲ್ಲ, ಬಟ್ ಸ್ವಲ್ಪ ಇದೆ ಎಂದು ಹೇಳಿದೆ. ಡಾಕ್ಟರ್ - ಗಂಟಲು ಬಗ್ಗೆ ಓದಿ ಕಲಿತ ಒಂದು ದೊಡ್ಡ ಪಾಠವನ್ನೇ ಮಾಡಿದರು. ನೀನೇನಾದರೂ ನೀನು ಹೇಳಿದ ಹಾಗೆ ಸ್ಟೇಪ್ಲರ್ ಪಿನ್ ಒಳಗಡೆ ಹೋಗಿದ್ದರೆ ಅದೂ ನಿನ್ನ ಶ್ವಾಸನಾಳದ ಮಧ್ಯ ಸಿಕ್ಕಿಹಾಕಿಕೊಂಡಿದ್ದರೆ ಈಗಾಗಲೇ ನಿನಗೆ ತುಂಬಾ ತೊಂದರೆಯಾಗಬೇಕಾಗಿತ್ತು. ಬಟ್ ಎಲ್ಲೋ ಒಂದು ಕಡೆ ಚುಚ್ಚಿಕೊಂಡಿದ್ದರಿಂದ ಅದು ನಿನಗೆ ಊತವಾಗಿದೆ. ಭಯ ಪಡಬೇಡ, ಒಂದೆರಡು ಟ್ಯಾಬ್ಲೆಟ್ ಬರೆದುಕೊಡುತ್ತೇನೆ. ಎಂಟಿಸೆಪ್ಟಿಕ್ ಕೊಟ್ಟಿದ್ದೇನೆ, ನಿನಗೆ ನೋವು ಮತ್ತೆ ಬಂದರೆ ಸೋಮವಾರ ಬಂದು ಸ್ಕ್ಯಾನಿಂಗ್ ಮಾಡಿಸಿ ನನ್ನನ್ನು ಕಾಣುವುದಾಗಿ ಹೇಳಿ ಹೊರಟುಹೋದರು.

ನನಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ. ಸಮಯ .೧೫ ಆಗಿತ್ತು. ನನ್ನ ಅಪ್ಪ-ಅಮ್ಮನಿಗೆ ಹೇಳಿದರೆ ಗಾಬರಿಯಾಗುತ್ತಾರೆ ಎಂದು ಸೈಲೆಂಟ್ ಆಗಿ ಮನೆಗೆ ತೆರಳಿದೆ. ಆದರೂ ನನಗೇನೋ ಒಂದು ರೀತಿಯ ಭಯ, ನನ್ನ ಮನಸ್ಸು ನನ್ನನ್ನು ಹೇಳಿಬಿಡು ಹೇಳಿಬಿಡು ಎಂದು ಪೀಡಿಸತೊಡಗಿತು. ಆದರೂ ಅದನ್ನು ನಾನು ಮುಚ್ಚಿಡಲು ಸಾಧ್ಯವಾಗಲಿಲ್ಲ. ರಾತ್ರಿ ಹೋಗಿ ಊಟ ಮಾಡಿದ ಬಳಿಕ ಮತ್ತೆ ವಾಕರಿಕೆ ಮಾಡಿದ್ದರಿಂದ ಅವರಿಗೆ ನೆಡೆದ ಘಟನೆ ವಿವರಿಸಿದೆ.  ನನ್ನ ಪೋಷಕರು ಅದನ್ನು ಕೇಳಿ ಚಿಂತೆಗೀಡಾಗಿ ನಾಳಿನ ಕಾರ್ಯಕ್ರಮವನ್ನು ಮುಂದೂಡುವುದಾಗಿ ಹೇಳಿದರು. ನನಗೇನೋ ಆಗ ಅಷ್ಟು ನೋವು ಇರಲಿಲ್ಲ, "ಪರವಾಗಿಲ್ಲ ನಾಳೆ ಹೋಗಿ ಹುಡುಗಿ ನೋಡಿಕೊಂಡು ಬರೋಣ" , ನಾನು ಹೇಗೋ ಇನ್ನೂ ಒಂದು ದಿನ ಕಳೆಯುತ್ತೇನೆ. ನಾಳೆ ಭಾನುವಾರ ಆದ್ದರಿಂದ ಗಂಟಲು 
ಸ್ಕ್ಯಾನಿಂಗ್ ಮಾಡುವವರು ಎಲ್ಲೂ ಸಿಗುವುದಿಲ್ಲ ಎಂದು ಹೇಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೇಗೋ ಆ ದಿನ ರಾತ್ರಿ ಟ್ಯಾಬ್ಲೆಟ್ ತೆಗೆದುಕೊಂಡು ಕಳೆದೆ.   ಮರುದಿನ ಬೆಳಿಗ್ಗೆ ಸ್ವಲ್ಪ ನೋವು ಕಡಿಮೆಯಾದಂತೆ 
ಅನಿಸಿತಾದರೂ ಗಂಟಲಲ್ಲಿ ಮುಳ್ಳು ಚುಚ್ಚುವಂತೆ ಭಾಸವಾಗುತ್ತಿತ್ತು. ನನ್ನ ಅಪ್ಪ-ಅಮ್ಮ ನಿನಗೆ ನೋವು ಕಡಿಮೆಯಾಗಿದ್ದರೆ ಮಾತ್ರ ಹುಡುಗಿ ನೋಡಲು ಹೋಗುವುದಾಗಿ ಹೇಳಿದರು. ನನಗೇನೋ ಮ್ಯಾನೇಜ್ ಮಾಡಬಹುದು ಎಂದೆನಿಸಿತು. ಹೇಗೋ ಅಂದು ಭಾನುವಾರ ಹೆಚ್ಚು ಮಾತನಾಡದೆ ೪-೫ ಹುಡುಗಿಯರನ್ನು ನೋಡಿಕೊಂಡು ಅವರು ಕೊಟ್ಟ 
ಚೌಚೌ ಬಾತ್, ಕಾಫಿ, ಟೀ ಕುಡಿದುಕೊಂಡು ದಿನ ಕಳೆದೆ. ಮಾರನೇ ದಿನ ಸೋಮವಾರ, ನನ್ನ ಪಚೀತಿಯನ್ನು ನನ್ನ ಕಂಪನಿ ಓನರ್ ಗೆ ಹೇಳಿ ತಡವಾಗಿ ಬರುವುದಾಗಿ ಕೇಳಿಕೊಂಡೆ. ಅವರು ಓಕೆ ಎಂದ ಕೂಡಲೇ ನನ್ನ ಮಾರ್ಗವು ನನ್ನ ಮನೆಯ ಬಳಿಯಿರುವ "ಮೂಗು-ಗಂಟಲು-ನಾಲಿಗೆ" ಈ-ನ್-ಟಿ ಸ್ಪೆಷಲಿಸ್ಟ್ ಕಡೆ ಹೊರಟಿತು. ಈ ಹಿಂದೆಯೇ ಒಂದು ಬಾರಿ ನನ್ನ ಸ್ನೇಹಿತನನ್ನು ಆ ಹಾಸ್ಪಿಟಲ್ ಗೆ ಕರೆದೊಯ್ದಿದ್ದೆ. ಆ ಡಾಕ್ಟರ್ ಕೂಡ ಎಕ್ಸಲೆಂಟ್ ಟ್ರೀಟ್ಮೆಂಟ್ ಕೊಟ್ಟಿದ್ದರು. ಅದೇ ವಿಶ್ವಾಸದ ಮೇರೆಗೆ ನಾನು ಅವರ ಬಳಿ ಹೋಗಿ ನನ್ನ ದುಃಖವನ್ನು ತೋಡಿಕೊಂಡೆ. ಅವರು ನಗುತ್ತಲೇ ಭಯಪಡುವುದು ಏನೂ ಬೇಡ. ನಿಮ್ಮಲ್ಲಿ ನಿಮಗೆ ಆತ್ಮ ವಿಶ್ವಾಸವಿರಲಿ. ಏನೇ ಇದ್ದರೂ ನಾನು ಚೆಕ್ ಮಾಡಿ ಹೇಳುತ್ತೇನೆ, ಇಂತಹ ಕೇಸ್ ನನಗೆ  ಮಾಮೂಲಿ ಎಂದು ಒಂದೆರಡು ಉದಾಹರಣೆ ಕೊಡುತ್ತಾ ಚೆಕ್ ಮಾಡಿದರು. ಮೊದಲಿಗೆ ಟಾರ್ಚ್ ಬಳಸಿ ನೋಡಿದರು. ಕಿರುನಾಲಿಗೆ ಕೆಳಗೆ ರಕ್ತ ಹೆಪ್ಪುಗಟ್ಟಿರುವಂತೆ  ಕಾಣಿಸಿತು. ಆನಂತರ ಮೈಕ್ರೋ ಕ್ಯಾಮೆರಾ ಅಳವಡಿಸಿದ ಒಂದು ಸಣ್ಣ ಪೈಪ್ ಹಾಕಿ ಚೆಕ್ ಮಾಡಿದರು. ಅದಾಗಲೇ ಆ ಜಾಗದ ಸುತ್ತ ಪಸ್ ತುಂಬಿಕೊಂಡಿತ್ತು.  ಚಾಲಾಕಿ ಡಾಕ್ಟರ್ ನನ್ನ ಗಮನ ಬೇರೆಡೆ ಸೆಳೆಯಲು ಹಳೆ ಸ್ಟೋರಿ ಹೇಳುತ್ತಾ ಉದ್ದವಾದ ಸಣ್ಣ ಚಿಮುಟವನ್ನು ಹಾಕಿ ಸಿಕ್ಕಿಹಾಕಿಕೊಂಡಿದ್ದನ್ನು ಕಿತ್ತೇಬಿಟ್ಟರು. ಕಿತ್ತ ಆ ಒಂದು ಸಣ್ಣ ತುಣುಕನ್ನು ನನ್ನ ಕೈಗೆ ಕೊಟ್ಟು ನಗುತ್ತಾ ಕುಳಿತರು. ನನಗೇನೋ ನಂಬುವುದಕ್ಕೆ ಆಗುತ್ತಿಲ್ಲ, ಎರಡೆರಡು ಬಾರಿ ಆ ತುಣುಕು ಏನೆಂಬುದನ್ನು ಪರೀಕ್ಷಿಸಿದೆ. ಅದೇನೆಂದರೆ ನಾವು ತಿನ್ನುವ ಜೀರಿಗೆ ಕಣ್ರೀ. ನಾನು ತಿಂದ ಆ ವೆಜ್ ಪೆಪ್ಸ್ನಲ್ಲಿ ಇದ್ದ ಸಣ್ಣ ಜೀರಿಗೆಯ ಚೂಪಾದ ತುದಿಯೊಂದು ನನ್ನ ಗಂಟಲಿಗೆ ನಾಟಿತ್ತು.  ಇದೇ ನೋಡಿ ಗೆಳೆಯರೇ ನಾನು ಪಟ್ಟ ತಾಪತ್ರಯ. ಇದರಲ್ಲಿ ನನಗೆ ತಿಳಿದಿದ್ದೇನೆಂದರೆ ತಿನ್ನುವ ಸಮಯದಲ್ಲಿ ಆಟವಾಡಿಕೊಂಡು ಗಮನವಿಲ್ಲದೆ ಆತುರಾತುರವಾಗಿ ಗಬಗಬ ಎಂದು ತಿನ್ನಬಾರದು ಹಾಗು ತಿನ್ನುವಾಗ ಅತ್ತ-ಇತ್ತ ತಿರುಗಬಾರದು. ನಾವು ನುಂಗುವ ಸಮಯದಲ್ಲಿ ಅತ್ತ-ಇತ್ತ ಕತ್ತು ತಿರುಗಿಸುತ್ತಿದ್ದರೆ ಊಟವು ನಮ್ಮ ಅನ್ನನಾಳದ ಕೆಳಗೆ ಇಳಿಯದೆ ಜೀರಿಗೆಯಂತ ಸಣ್ಣ ಪದಾರ್ಥಗಳೂ ನಮಗೆ ಮಾರಕವಾಗಬಲ್ಲದು.

**** ಜೀವನ ಸೂಕ್ಷ್ಮ. ಜೀವ ಅತೀ ಸೂಕ್ಷ್ಮ****

No comments:

Post a Comment